
ಮಂಗಳೂರು: ಕೃಷ್ಣ ಜೆ. ಪಾಲೇಮಾರ್ ನೇತೃತ್ವದ ನಾಲ್ಕು ಸಭಾಭವನಗಳ ಲೋಕಾರ್ಪಣೆಗೆ ಚಾಲನೆ.
ಮಂಗಳೂರು ಮಹಾನಗರದ ಜೆಪ್ಪು ಕಡೆಕಾರು, ಜೆಪ್ಪಿನಮೊಗರು ನೇತ್ರಾವತಿ ನದಿ ತೀರದ ಪ್ರದೇಶದಲ್ಲಿನ ನೇತ್ರಾವತಿ ಸಭಾಂಗಣ ದಲ್ಲಿ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆಗೆ ಚಾಲನೆ ನೀಡುವ ಪೂರ್ವಭಾವಿ ಸಮಾರಂಭ ಜರುಗಿತು.
ಮಾಜಿ ಸಚಿವ ಶ್ರೀ ಕೃಷ್ಣ ಜೆ. ಪಾಲೇಮಾರ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಸಭೆ ಹಾಗೂ ಸಮಾರಂಭಗಳಿಗಾಗಿ ನಿರ್ಮಿಸಲಾದ ನೇತ್ರಾವತಿ ಸಭಾಭವನ, ಪಾಲೇಮಾರ್ ಕನ್ವೆನ್ನನ್ ಸೆಂಟರ್, ಪಾಲೇಮಾರ್ ಫಾರ್ಮ್ಸ್ ಮತ್ತು ಪಾಲೇಮಾರ್ ಗಾರ್ಡನ್ ಸೇರಿ ನಾಲ್ಕು ಸೌಲಭ್ಯಗಳ ಲೋಕಾರ್ಪಣೆಗೆ ಸಿದ್ಧತೆ ನಡೆದಿದ್ದು, ಅಧಿಕೃತ ಲೋಕಾರ್ಪಣೆಯು ಶನಿವಾರ, ಮೇ 23, 2026ರಂದು ನಡೆಯಲಿದೆ. ಅದಕ್ಕೂ ಮುನ್ನ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಲೋಕಾರ್ಪಣೆಗೆ ಪೂರ್ವಭಾವಿ ಚಾಲನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಯೋಗಿಶ್ ಅವರು ನೆರವೇರಿಸಿದರು. ಬಳಿಕ ವೇದಿಕೆಯಲ್ಲಿ ಗಣ್ಯರನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು. ದೀಪ ಪ್ರಜ್ವಲನೆಯ ಮೂಲಕ ಲೋಕಾರ್ಪಣೆಗೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ಪಾಲೇಮಾರ್ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.
ಮಾತೆ ಶಕುಂತಲಾ ನರೇಂದ್ರನಾಥ ಕೋಟೆಕಾರ್ ಮಾತನಾಡಿ, ಚಾಲನೆ ಒಂದು ದೈವಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಸುಮಾರು 40 ವರ್ಷಗಳ ಬಳಿಕ ಮತ್ತೆ ನೇಮೋತ್ಸವ ನಡೆದಿರುವುದು ಕಾರ್ಣಿಕ ಎಂದು ಅವರು ಹೇಳಿದರು. ಈ ಸ್ಥಳದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ದೈವಿಕ ಶಕ್ತಿ ಅಡಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಈ ಕ್ಷೇತ್ರದ ಮಹಿಮೆ ಆದ್ಯಾತ್ಮಿಕ ಚಿಂತನೆಯಿಂದ ಬಂದಿರುವುದು ಎಂದು ಹೇಳಿದರು. ಸಭಾಂಗಣಗಳು ಕೇವಲ ಸಮಾರಂಭಗಳ ಸ್ಥಳವಲ್ಲ, ಅವು ಆತ್ಮೀಯತೆ ಮತ್ತು ಸಮಾಜದ ಅಭಿವೃದ್ಧಿಗೆ ಕೇಂದ್ರವಾಗಬೇಕು ಎಂದು ಹೇಳಿದರು. ಲೋಕ ಸಮೃದ್ಧಿಯತ್ತ ಸಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಈ ಕ್ಷೇತ್ರದ ಪವಿತ್ರತೆಯನ್ನು ಅನುಭವಿಸಬೇಕು ಎಂದು ಹೇಳಿದರು. ಧರ್ಮ ಮತ್ತು ಪ್ರೀತಿಯ ಅಡಿಪಾಯದಲ್ಲಿ ಸಮಾಜ ಬೆಳೆಯಬೇಕು ಎಂದು ಹೇಳಿದರು. ಕೃಷ್ಣ ಜೆ. ಪಾಲೇಮಾರ್ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಮಾತನಾಡಿ, ನೇತ್ರಾವತಿ ತಟದಲ್ಲಿರುವ ಈ ಸಭಾಭವನಗಳು ಸಾರ್ವಜನಿಕ ಉಪಯೋಗಕ್ಕೆ ಸಮರ್ಪಿತವಾಗಿವೆ ಎಂದು ಹೇಳಿದರು. ತಮ್ಮ ಕುಟುಂಬದ ಹಿನ್ನೆಲೆ ಹಾಗೂ ಈ ಸ್ಥಳದೊಂದಿಗೆ ಇರುವ ಸಂಬಂಧವನ್ನು ಹಂಚಿಕೊಂಡರು. ಸಾಂಸ್ಕೃತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೂಲಕ ಸಮುದಾಯ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಈ ಯೋಜನೆಗಳು ಒಂದು ಮಹತ್ವದ ಸಾಧನೆ ಎಂದು ಹೇಳಿದರು. ಪಾಲೇಮಾರ್ ಅವರನ್ನು ತಮ್ಮ ರಾಜಕೀಯ ಗುರುಗಳಾಗಿ ಗುರುತಿಸಿ, ಸಮಾಜಮುಖಿ ಕಾರ್ಯಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಈ ರೀತಿಯ ಯೋಜನೆಗಳು ಮುಂದಿನ ಪೀಳಿಗೆಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕದ್ರಿ ನವನೀತ ಶೆಟ್ಟಿಯವರು ನೆರವೇರಿಸಿದರು.










